Monday, September 19, 2011

ಮಾನ್ಯ ಸಚಿವರುಗಳಿಗೆ ___ ಗೃಹ ನಿರ್ಮಾಣ

ಬೆಂಗಳೂರು ನಗರದಿಂದ ಮೇಕ್ರಿ ವೃತ್ತದ ಮಾರ್ಗವಾಗಿ ದೇವನಹಳ್ಳಿಯಲ್ಲಿರುವ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನೀವು ಸಾಗಿ ಹೋಗುವುದಾದರೆ, ಹೆಬ್ಬಾಳ ಮೇಲುಸೇತುವೆಗೆ ಕೆಲವೇ ಮೀಟರ್ ಅಂತರದಲ್ಲಿ ನಿಮ್ಮ ಎಡಭಾಗಕ್ಕೆ ಮೇಲ್ಕಾಣಿಸಿದ ಫಲಕವೊಂದು ಗೋಚರಿಸುತ್ತದೆ. ಅದರಲ್ಲಿರುವ ಸಾರಾಂಶ ಇಂತಿದೆ:

ಕರ್ನಾಟಕ ಸರ್ಕಾರ
ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ
ಯೋಜನೆ ಹೆಸರುಬೆಂಗಳೂರು ನಗರ ಹೆಬ್ಬಾಳದಲ್ಲಿ ಕರ್ನಾಟಕ ಸರ್ಕಾರದ ಮಾನ್ಯ ಸಚಿವರುಗಳಿಗೆ 15 ವಸತಿ ಗೃಹಗಳ ನಿರ್ಮಾಣ
ಯೋಜನಾ ಮೊತ್ತ5,500=00 ಲಕ್ಷಗಳು
ಯೋಜನೆಯ ಕಾಲಾವಧಿ20 ತಿಂಗಳು
ಯೋಜನೆಯ ಪ್ರಾರಂಭಿಕ ದಿನಾಂಕ23-10-2009
ಯೋಜನೆ ಪೂರ್ಣಗೊಳ್ಳುವ ದಿನಾಂಕಜೂನ್ 2011

ಇದೇ ಮಾರ್ಗವಾಗಿ ಕ್ರಮಿಸುತ್ತಾ, ನನ್ನೊಬ್ಬ ಗೆಳೆಯರಿಗಾಗಿ ಕಾದು ನಿಂತಿದ್ದ ನನ್ನ ಕಣ್ಣಿಗೆ ಈ ಫಲಕವು ಕಾಣದೇ ಇರಲಿಲ್ಲ. ಕೂಲಂಕಷವಾಗಿ ಅದರಲ್ಲಿದ್ದ ಮಾಹಿತಿಯನ್ನೆಲ್ಲಾ ನಿಧಾನವಾಗಿ ಓದಿಕೊಂಡೆ. ಮನಸ್ಸಿನ ಆಳದಲ್ಲೆಲ್ಲೋ ಪುಟಿದ ವಿಷಾದದ ಅಲೆಯು ನಿಟ್ಟುಸಿರಾಗಿ ತೇಲಿಹೋಯಿತು.

ಇತ್ತೀಚಿಗೆ, ಅಂದರೆ 2009 ರಲ್ಲಿ, ಬಳ್ಳಾರಿ ರಸ್ತೆಯಲ್ಲಿ 1957 ರಿಂದಲೂ ಅಸ್ತಿತ್ವದಲ್ಲಿದ್ದ ಮೈಸೂರು ಪಶುವೈದ್ಯಕೀಯ ಕಾಲೇಜು ಕಟ್ಟಡವನ್ನು ತೆರವುಗೊಳಿಸಿ, ಸಚಿವರುಗಳಿಗೆ ಅಲ್ಲಿ ವಸತಿಗೃಹಗಳನ್ನು ನಿರ್ಮಾಣ ಮಾಡುವ ಸದು(ದುರು)ದ್ದೇಶವನ್ನು ಅಂದಿನ ಸಚಿವರಾದ 'ಸನ್ಮಾನ್ಯ ಶ್ರೀ' ಕಟ್ಟಾ ಸುಬ್ರಮಣ್ಯ ನಾಯ್ಡು ರವರು ಹೊಂದಿದ್ದರು. ಆದರೆ ಅದೃಷ್ಟವಶಾತ್ ಅವರ ಆಶಯ ಫಲಿಸಲ್ಲಿಲ್ಲ. ಹಾಗಾಗಿ ಅಲ್ಲೇ ಹತ್ತಿರದಲ್ಲೆಲ್ಲೋ ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಾಧೀಶರುಗಳಿಗೆ ವಸತಿಗೃಹ ನಿರ್ಮಾಣ ಮಾಡಿಕೊಡುವುದಾಗಿ ಸುದ್ದಿ ಮಾಡಿ ಸೈ ಎನಿಸಿಕೊಳ್ಳಲು ಹವಣಿಸಿದ್ದು ಈಗ ಇತಿಹಾಸ.

ಕರ್ನಾಟಕದ ಮಾನ್ಯ ಸಚಿವರುಗಳ ವಿರುಧ್ಧ ವೈಯಕ್ತಿಕವಾಗಿ ನನಗೇನೂ ದ್ವೇಷವಿಲ್ಲ. ಒಬ್ಬೊಬ್ಬ ಸಚಿವರುಗಳೂ ಕರ್ನಾಟಕ ಹಾಗೂ ಕನ್ನಡಿಗರು ಕಂಡ ಮಹಾನ್ ಮೆಧಾವಿಗಳಲ್ಲವೇ? ಅವರುಗಳ ಜನಸೇವೆಯನ್ನು ಹಾಡಿ-ಹೊಗಳಿ ಗುಣಗಾನ ಮಾಡಲು ಪದಗಳೇ ಸಿಗುವುದಿಲ್ಲವಲ್ಲ! ಇವರುಗಳಿಗೆಲ್ಲಾ ಹೆಬ್ಬಾಳದ ಪಶುವೈದ್ಯಕೀಯ ಕಾಲೇಜನ್ನು ನೆಲಸಮ ಮಾಡಿ ಅಲ್ಲಿ ವಸತಿ-ಗೃಹಗಳನ್ನು ನಿರ್ಮಿಸಿಕೊಡುವ ಬದಲು, ಪರಪ್ಪನ ಅಗ್ರಹಾರದಲ್ಲೆಲ್ಲಾದರೂ ಖಾಲಿ ಜಾಗವಿದ್ದರೆ ಅಲ್ಲಿ ಹೆಚ್ಚುವರಿಯಾಗಿ ಕೆಲವು ಕಾರಾ-ಗೃಹಗಳನ್ನು ಕಟ್ಟಿಸಿಕೊಟ್ಟರೆ ಉಪಯೋಗಕ್ಕಾದರೂ ಬಂದೀತು.. ಅಲ್ಲವೇ?

2 comments:

  1. ಖಾರವಾದ ಬರಹ ಪ್ರಶಾಂತ.
    ಆದರೆ ನಿಮ್ಮ ಯೋಚನೆಗೆ ನನ್ನ ಸಹಮತವಿದೆ.. ಜನರಿಗಾಗಿ ಅಂತ ಯೋಚಿಸಲೂ ಸಮಯವಿರೋಲ್ಲ ನಮ್ಮ ಸಚಿವರಿಗೆ. ತಮಗೆ, ತಮ್ಮವರಿಗೆ ಯಾವ ರೀತಿಯಲ್ಲಿ ಸುಖ ಕೊಡಿಸಬಹುದು ಅಷ್ಟೇ..
    ಅವರಿಗೆಲ್ಲ ನಾವು ಹೇಳೋದು ಇಷ್ಟೇ. ನಮ್ಮಿಂದಲೇ ನೀವು ಅಷ್ಟು ಮೇಲೆ ಹತ್ತಿರೋದು.. ನಾವು ನಿಮ್ಮವರೇ.. :(

    ReplyDelete
  2. ಸಹನಾ ಅವರೇ, ಪ್ರಸಕ್ತ ರಾಜಕೀಯ 'ಹದಗೆಟ್ಟಿದೆ' ಎಂದರೂ ಕಡಿಮೆಯಾದೀತು. ಹಿಂದೆಂದೂ ಕಂಡರಿಯದ ನೀಚ ರಾಜಕೀಯವು ನಮ್ಮೆಲ್ಲರನ್ನೂ ಈಗ ಆಳುತಲಿದೆ. ಇಂದು ಮುಖ್ಯಮಂತ್ರಿಯಾಗಿದ್ದವರು ನಾಳೆ ಹಗರಣಗಳ ಆರೋಪಿ - ಸೆರೆಮನೆವಾಸಿ. ತಮ್ಮಗಳ ಸ್ವಾರ್ಥ ಸಾಧನೆಗಾಗಿ ಏನೂ ಮಾಡಲು ಹೇಸದ ಹೊಲಸು ರಾಜಕಾರಣಿಗಳ ಬಗ್ಗೆ ಖಾರವಾಗಿ ಬರೆಯದೆ ಅನ್ಯ ಮಾರ್ಗವುಂಟೆ?
    ರಾಜಕೀಯದ ಬಗ್ಗೆ ಬರೆದು ಈ ತಾಣವನ್ನು ಅಪವಿತ್ರಗೊಳಿಸಿದೆನೇನೋ ಎಂಬ ಭ್ರಮೆ ನನ್ನಲ್ಲಿ ಈಗ ಮೂಡಿದೆ..

    ReplyDelete

ಖಂಡಿತಾ ನಿಮ್ಮ ಅನಿಸಿಕೆಗಳನ್ನು ತಿಳಿಸಿ. ಧನ್ಯವಾದಗಳು!
Please post your comments. Thank you!