Monday, April 11, 2011

ಕ್ರಿಕೆಟ್ ಚಕ್ರಾಧಿಪತ್ಯ

Image Courtesy: ESPN (click image to enlarge)
ಪ್ರಪಂಚದಾದ್ಯಂತ ಇರುವ ಅಸಂಖ್ಯಾತ ಭಾರತೀಯ ಕ್ರಿಕೆಟ್ ಪ್ರೇಮಿಗಳ 28 ವರ್ಷಗಳ ಕನಸನ್ನು ನನಸಾಗಿಸಿರುವ ಮಹೇಂದ್ರ ಸಿಂಗ್ ಧೋನಿ ಮತ್ತು ತಂಡದವರು ನಮ್ಮಗಳೆಲ್ಲರ ಹೃದಯ ಸಿಂಹಾಸನವನ್ನಲಂಕರಿಸಿದ್ದಾರೆ. ಅಷ್ಟು ಮಾತ್ರವಲ್ಲ, ಜಗತ್ತಿನ ಅಂತಾರಾಷ್ಟ್ರೀಯ ಕ್ರಿಕೆಟ್ ಚಕ್ರಾಧಿಪತ್ಯವನ್ನು ಇನ್ನು ನಾಲ್ಕು ವರ್ಷಗಳ ಕಾಲ ಭಾರತ ದೇಶಕ್ಕೆ ಮೀಸಲಿರಿಸಿದ್ದಾರೆ. ಇದೊಂದು ಅವಿಸ್ಮರಣೀಯ, ಅದ್ಭುತ ಸಾಧನೆ!

1983 ರಲ್ಲಿ ಕಪಿಲ್ ದೇವ್ ನೇತೃತ್ವದ ಭಾರತ ಕ್ರಿಕೆಟ್ ತಂಡ ಪ್ರಪ್ರಥಮ ಬಾರಿಗೆ ವಿಶ್ವಕಪ್ ಗೆಲ್ಲುವ ಮೂಲಕ ಕ್ರಿಕೆಟ್ ಇತಿಹಾಸದ ಪುಟಗಳಲ್ಲಿ ಭಾರತದ ಸಾಧನೆಯನ್ನು ಸುವರ್ಣಾಕ್ಷರಗಳಲ್ಲಿ ನಮೂದಿಸಿತ್ತು. ಅಂಥಹುದೊಂದು ಮಹತ್ತರ ಸಾಧನೆಯನ್ನು ಮತ್ತೆ ಸಾಧಿಸಿ ತೋರಿಸುವಲ್ಲಿ ಸೌರವ್ ಗಂಗೂಲಿ ಪಡೆ 2003 ರ ವಿಶ್ವಕಪ್ ಸಮರದಲ್ಲಿ ಎಡವಿತ್ತು. ಅಲ್ಲಿಂದೀಚೆಗೆ, ಭಾರತೀಯರೆಲ್ಲರಲ್ಲಿ ಕ್ರಿಕೆಟ್ ವಿಶ್ವಕಪ್ ತಮ್ಮದಾಗಿಸಿಕೊಳ್ಳುವ ಹಂಬಲ ಅಗಾಧವಾಗಿದ್ದಿತು. ಈ ಮಹದಾಸೆಯನ್ನು ಪೂರೈಸುವಲ್ಲಿ ಭಾರತ ಕ್ರಿಕೆಟ್ ತಂಡವು 2011 ರಲ್ಲಿ ಯಶಸ್ವಿಯಾಗಿರುವುದು ಸಂತಸ ಹಾಗೂ ಹೆಮ್ಮೆಯ ವಿಷಯ.

ಮೂಲತಃ ಭಾರತೀಯ ಕ್ರೀಡೆಯಲ್ಲದಿದ್ದರೂ, ಕ್ರಿಕೆಟ್ ಗೆ ಭಾರತದಲ್ಲಿ ವಿಶಿಷ್ಟವಾದ ಸ್ಥಾನವಿದೆ; ಅದ್ಭುತ ಸಾಧಕರೂ ಇದ್ದಾರೆ - ಇದಕ್ಕೆ ಸಚಿನ್ ತೆಂಡೂಲ್ಕರ್ ರವರಿಗಿಂತ ಅನ್ಯ ಉಲ್ಲೇಖದ ಅಗತ್ಯವಿಲ್ಲ. 'ನಾವು ಈ ವಿಶ್ವಕಪ್ ಅನ್ನು ಸಚಿನ್ ರವರಿಗೆ ಗೆದ್ದುಕೊಡುವವರಿದ್ದೇವೆ' ಎಂದು 2011 ರ ವಿಶ್ವಕಪ್ ಪ್ರಾರಂಭಕ್ಕೆ ಮುನ್ನವೇ ಧೋನಿ ಹೇಳಿಕೆ ನೀಡಿದ್ದರು; ಅದರಂತೆ ನಡೆದುಕೊಂಡರೂ ಸಹ. ಇದು ಸಾಧ್ಯವಾದದ್ದು ಸಚಿನ್ ರವರ ಹುಟ್ಟೂರಾದ ಮುಂಬಯಿ ನೆಲದಲ್ಲಿ - ಭಾರತ ತಂಡದ ಆಟಗಾರರಿಗೆ ಒಬ್ಬ ಮೇಧಾವಿ ಕ್ರಿಕೆಟಿಗನಿಗೆ ಅಭಿನಂದನಾ ಗೌರವವನ್ನು ಸಲ್ಲಿಸಲು ಇದಕ್ಕಿಂತ ಉತ್ತಮ ಅವಕಾಶ, ಮಾರ್ಗ ದೊರೆಯುತ್ತಿರಲಿಲ್ಲ. ವಿಶ್ವಕಪ್ ಗೆದ್ದ ಆ ಕ್ಷಣ, ಸಚಿನ್ ಅವರು ತಮ್ಮ ಜೀವನದಲ್ಲಿ ಬಹು ದಿನಗಳಿಂದ ನಿರೀಕ್ಷಿಸಿದ್ದ 'ಅಮೃತ ಘಳಿಗೆ' ಎಂದರೆ ತಪ್ಪಾಗಲಾರದು.

2011 ರಲ್ಲಿ ಕ್ರಿಕೆಟ್ ವಿಶ್ವಕಪ್ ಗೆಲ್ಲಲು ಭಾರತವು ಮೂರು ಫೈನಲ್ ಪಂದ್ಯಗಳಲ್ಲಿ ಜಯಗಳಿಸಬೇಕಾಯಿತು - ಆಸ್ಟ್ರೇಲಿಯಾ, ಪಾಕಿಸ್ತಾನ ಮತ್ತು ಶ್ರೀಲಂಕ ತಂಡಗಳ ವಿರುದ್ಧ. ಕಳೆದ ಹಲವಾರು ವರ್ಷಗಳಿಂದ ಕ್ರಿಕೆಟ್ ಸಾಮ್ರಾಜ್ಯವನ್ನು ಆಳುತ್ತಿದ್ದ ಆಸ್ಟ್ರೇಲಿಯಾ ತಂಡವನ್ನು ಮಣಿಸಿದ್ದೇ ಒಂದು ಮಹತ್ವದ ಜಯ. ಭಾರತವು ತನ್ನ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಜಯಗಳಿಸುತ್ತಿದ್ದಂತೆಯೇ ಭಾರತೀಯರೆಲ್ಲರಲ್ಲಿ ವಿಶ್ವಕಪ್ ಗೆದ್ದಷ್ಟೇ ಸಂಭ್ರಮ ಮನೆಮಾಡಿತ್ತು. ಅದರ ಬೆನ್ನಹಿಂದೆಯೇ ಪ್ರಬಲ ಎದುರಾಳಿ ಶ್ರೀಲಂಕ ತಂಡವನ್ನು ಆತ್ಮವಿಶ್ವಾಸ ತುಂಬಿದ ದಿಟ್ಟ ಹೋರಾಟದಿಂದ ಬಗ್ಗುಬಡಿದು ವಿಶ್ವಕಪ್ ಗೆದ್ದಾಗ, ನಮಗೆಲ್ಲ ಸ್ವರ್ಗ ಮೂರೇ ಗೇಣು! ಕ್ರಿಕೆಟ್ ವಿಶ್ವಕಪ್ ಗೆಲ್ಲಲು ಭಾರತವು ನಡೆದು ಬಂದ ದಾರಿ ಈ ಗೆಲುವಿಗೊಂದು ವಿಶೇಷ ಮಹತ್ವ-ಅರ್ಥ ತಂದುಕೊಟ್ಟಿದೆ.

ಚಾಂಪಿಯನ್ನರಾಗಲು ತಂಡದ ಗೆಲುವಿಗೆ ಪ್ರತಿಯೊಬ್ಬ ಆಟಗಾರರೂ ಸಹ ಯತೇಚ್ಛವಾಗಿ ಪ್ರಯತ್ನಿಸುತ್ತಿದ್ದುದು ಪಂದ್ಯಗಳಲ್ಲಿ ಎದ್ದು ಕಾಣುತ್ತಿದ್ದ ಮಹತ್ವದ ಅಂಶ. ಯುವರಾಜ್ ಸಿಂಗ್, ಜಹೀರ್ ಖಾನ್, ಹರ್ಭಜನ್ ಸಿಂಗ್, ಗೌತಮ್ ಗಂಭೀರ್, ವಿರಾಟ್ ಕ್ಹೋಲಿ, ಸುರೇಶ ರೈನಾ ಇವರುಗಳನ್ನೊಳಗೊಂಡು ತಂಡದ ಪ್ರತಿಯೊಬ್ಬ ಆಟಗಾರರೂ ತೋರಿಸಿದ ಶ್ರಧ್ಧೆ ಮತ್ತು ಹೋರಾಟದ ಮನೋಭಾವವನ್ನು ಮೆಚ್ಚಲೇಬೇಕು. ತಂಡದ ತರಬೇತುದಾರ, ದಕ್ಷಿಣ ಆಫ್ರಿಕಾ ದೇಶದ ಮಾಜಿ ಆಟಗಾರ ಗ್ಯಾರಿ ಕರ್ಸ್ಟನ್ ರವರ ತೆರೆಮರೆಯ ಶ್ರಮ ಪ್ರಶಂಸನೀಯ ಹಾಗೂ ಅಭಿನಂದನೀಯ. ಈ ಗೆಲುವು ಸಂಘಟಿತ ಹೋರಾಟಕ್ಕೆ ಸಿಕ್ಕ ಪ್ರತಿಫಲವೇ ಸರಿ.

ಭಾರತ ಕ್ರಿಕೆಟ್ ತಂಡದ ಯಶಸ್ಸಿಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಕಾರಣರಾದ ಪ್ರತಿಯೊಬ್ಬರಿಗೂ ಈ ಮೂಲಕ ಅನಂತಾನಂತ ಧನ್ಯವಾದಗಳನ್ನು  ಹಾಗೂ ತುಂಬು ಹೃದಯದ ಶುಭಾಶಯಗಳನ್ನು ಅರ್ಪಿಸುತ್ತೇನೆ.

No comments:

Post a Comment

ಖಂಡಿತಾ ನಿಮ್ಮ ಅನಿಸಿಕೆಗಳನ್ನು ತಿಳಿಸಿ. ಧನ್ಯವಾದಗಳು!
Please post your comments. Thank you!